ಶಿಕ್ಷಣ ಕ್ಷೇತ್ರ ಇಂದು ಹಲವಾರು ಸಮಸ್ಯೆಗಳ ಆಗರವಾಗಿದೆ. ಶಿಕ್ಷಕ ಸಮುದಾಯದ ಸಮಸ್ಯೆಗಳು ಮುಗಿಯದ ಗೋಳಾಗಿ ಹಾಗೆಯೇ ಉಳಿದುಕೊಂಡಿದೆ. ಈ ಸಮಸ್ಯೆಗಳು ಮುಗಿಯುವ ಬದಲಾಗಿ ದಿನೇದಿನೆ ಜಟಿಲಗೊಳ್ಳುತ್ತಿದೆ. ಖಾಸಗಿ ಶಾಲಾ -ಕಾಲೇಜು/ ಸರಕಾರಿ ಶಾಲಾ-ಕಾಲೇಜು/ ಅನುದಾನಿತ ಶಾಲಾ -ಕಾಲೇಜು ಶಿಕ್ಷಕರ ಸಮಸ್ಯೆಗಳು, ದೈಹಿಕ ಶಿಕ್ಷಣ ಹಾಗೂ ಕಲಾ ಮತ್ತು ಕಸೂತಿ ಶಿಕ್ಷಕರ ಸಮಸ್ಯೆಗಳು, ವಸತಿ ಶಾಲಾ ಶಿಕ್ಷಕರ ಸಮಸ್ಯೆಗಳು, ಭಡ್ತಿ ಹೊಂದಿದ ಶಿಕ್ಷಕರ ಸಮಸ್ಯೆಗಳು, ಮುಖ್ಯೋಪಾಧ್ಯಾಯರು ಹಾಗೂ ಪ್ರಾಂಶುಪಾಲರ ಸಮಸ್ಯೆಗಳು, ಪಿಂಚಣಿಯ ಸಮಸ್ಯೆ, ಭರ್ತಿಯಾಗದೆ ಖಾಲಿ ಇರುವ ಶಿಕ್ಷಕ ಹುದ್ದೆಗಳ ಸಮಸ್ಯೆಗಳು, ಪರೀಕ್ಷಾ ಹಾಗೂ ಮೌಲ್ಯಮಾಪನ ಕಾರ್ಯ ನಿರ್ವಹಣಾ ಸಮಸ್ಯೆಗಳು ಇವೇ ಇತ್ಯಾದಿ ವಿಷಯಗಳು ಯಾವುದೇ ಪರಿಹಾರವನ್ನು ಕಾಣದೆ, ಪರಿಹಾರಗೊಳ್ಳುವ ನಿರೀಕ್ಷೆಯೂ ಇಲ್ಲದೆ ಹಾಗೆಯೇ ಮುಂದುವರಿಯುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ರಾಜ್ಯದ ಪ್ರಸ್ತುತ ಕರ್ನಾಟಕ ನಾಗರಿಕ ಸೇವಾ ಅಧಿನಿಯಮ. ಇದು ಶಿಕ್ಷಕರ ಸಮಸ್ಯೆಗಳನ್ನು ಎದುರಿಸುವಲ್ಲಿ ಅತ್ಯಂತ ದುರ್ಬಲವಾಗಿದೆ. ಆದುದರಿಂದ ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯ್ದೆ ಜಾರಿಗೊಳ್ಳುವ ಅಗತ್ಯ ಇದೆ. ಇದನ್ನು ಎಲ್ಲಾ ಶಿಕ್ಷಕ ಸಂಘಟನೆಗಳ ಪ್ರಮುಖರು, ಶಿಕ್ಷಣ ತಜ್ಞರು ಹಾಗೂ ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡು ವಿಧಾನ ಪರಿಷತ್ ನ ಮುಂದಿನ ಅಧಿವೇಶನದಲ್ಲಿ ಖಾಸಗಿ ಮಸೂದೆಯಾಗಿ ಮಂಡಿಸಲು ಬದ್ಧನಾಗಿರುತ್ತೇನೆ. ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ವರ್ಗದ ಶಿಕ್ಷಕರ ಬೆಂಬಲದೊಂದಿಗೆ ಚಳವಳಿಯ ರೂಪದಲ್ಲಿ ಹಕ್ಕೊತ್ತಾಯ ಮಾಡುವ ಮೂಲಕ ಈ ಮಸೂದೆಯನ್ನು ಅನುಷ್ಠಾನಗೊಳಿಸಲು ಕಾರ್ಯಬದ್ಧನಾಗಿದ್ದೇನೆ.
ಪ್ರಾಥಮಿಕ ಶಾಲಾ ಶಿಕ್ಷಕರಿಂದ ಹಿಡಿದು ಸ್ನಾತಕೋತ್ತರ ಪದವಿ ಶಿಕ್ಷಕರ ವೃತ್ತಿಯು ಇತರ ಸೇವಾ ವೃತ್ತಿಗಳಿಗಿಂತ ಭಿನ್ನವಾದುದಾಗಿದೆ. ಅವರು ಯಂತ್ರ ಅಥವಾ ಫೈಲುಗಳೊಂದಿಗೆ ಕೆಲಸ ಮಾಡುತ್ತಿಲ್ಲ. ಬೋಧನೆ ಮತ್ತು ಬೋಧನಾ ಪೂರಕ ಚಟುವಟಿಕೆಗಳ ಮೂಲಕ ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಯ ಮಹತ್ವದ ಕಾರ್ಯವನ್ನು ಅವರು ನಿರ್ವಹಿಸುತ್ತಿದ್ದಾರೆ. ಪುಟ್ಟ ಕಂದಮ್ಮಗಳಿಂದ ಹಿಡಿದು ಯುವ ಮನಸ್ಸುಗಳನ್ನು ಬೆಸೆಯುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತಿದ್ದಾರೆ. ಈ ಮಹತ್ತರ ಜವಾಬ್ದಾರಿಯ ಸೇವಾ ಕಾರ್ಯವು ಇತರ ಸೇವೆ ಮತ್ತು ವೃತ್ತಿ ಕಾರ್ಯಗಳಿಗಿಂತ ಸಂಪೂರ್ಣ ಭಿನ್ನವೇ ಆಗಿದೆ. ಈ ದೃಷ್ಟಿಯಿಂದ ಶಿಕ್ಷಕ ವೃತ್ತಿಯನ್ನು ಭಿನ್ನವಾಗಿ ಪರಿಗಣಿಸಿ ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯ್ದೆಯನ್ನು ರೂಪಿಸಬೇಕಾದ ಅಗತ್ಯವಿದೆ.
ಖಾಸಗಿ/ ಸರಕಾರಿ/ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ವಿಭಿನ್ನ ನೆಲೆಯಲ್ಲಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಾರ್ಯವು ಕೇವಲ ಬೋಧನಾ ಕಾರ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೋಧನಾ ಚಟುವಟಿಕೆಗಳಿಗೆ ಪೂರಕವಾದ ವಿಚಾರ ಸಂಕಿರಣಗಳು, ಶೈಕ್ಷಣಿಕ ಸಮ್ಮೇಳನಗಳನ್ನು ನಡೆಸುತ್ತಾರೆ ಮತ್ತು ಭಾಗವಹಿಸುತ್ತಾರೆ. ಅಧ್ಯಯನ ಮತ್ತು ಸಂಶೋಧನಾ ಕಾರ್ಯವನ್ನೂ ಮಾಡುತ್ತಾರೆ. ಶಿಕ್ಷಕರು ನಿರ್ವಹಿಸುವ ಕಾರ್ಯವು ಇತರ ವೃತ್ತಿಗಳಿಗಿಂತ ಸಂಪೂರ್ಣ ಭಿನ್ನವೇ ಆಗಿದೆ. ಪ್ರಸ್ತುತ ಇರುವ ಕರ್ನಾಟಕ ಸೇವಾ ಅಧಿನಿಯಮದ ಕಾಯ್ದೆಯು ಶಿಕ್ಷಕರನ್ನೂ ಒಳಗೊಳ್ಳುತ್ತದೆಯಾದರೂ ಅದರ ಬಹುತೇಕ ನಿಯಮಗಳು ಇತರ ವೃತ್ತಿ ಸೇವಾ ವಿಭಾಗಗಳನ್ನು ಗಮನದಲ್ಲಿಟ್ಟುಕೊಂಡು ಜಾರಿಯಾಗಿದೆ. ಪ್ರಸ್ತುತ ಇರುವ ಕಾಯ್ದೆಯು ಶಿಕ್ಷಕ ಸಮುದಾಯದ ಹಿತವನ್ನು ಕಾಯುವಲ್ಲಿ ವಿಫಲಗೊಂಡಿದೆ. ಹಾಗಾಗಿ ಶಿಕ್ಷಕ ಸಮುದಾಯದ ಸಮಸ್ಯೆಗಳು ಪರಿಹಾರವಾಗದೆ ದಿನದಿಂದ ದಿನಕ್ಕೆ ಹೆಚ್ಚು ಸಂಕೀರ್ಣಗೊಂಡು ಜಟಿಲಗೊಳ್ಳುತ್ತಿದೆ. ಹೀಗಾಗಿ ಶಿಕ್ಷಕರ ಪ್ರತ್ಯೇಕ ಶಿಕ್ಷಕರ ಸೇವಾ ಅಧಿನಿಯಮದ ಕಾಯ್ದೆಯನ್ನು ಜಾರಿಗೊಳಿಸಲೇಬೇಕಾಗಿದೆ. ಇದರಿಂದ ಶೈಕ್ಷಣಿಕ ರಂಗದ ಪ್ರತಿಯೊಂದು ವಿಭಾಗದ ಶಿಕ್ಷಕರ ಸಮಸ್ಯೆಗಳನ್ನು ವಸ್ತುನಿಷ್ಠವಾಗಿ ಬಗೆಹರಿಸಬಹುದಾಗಿದೆ. ಹಾಗೂ ಕಾಲಮಿತಿಯೊಳಗೆ ಈ ಎಲ್ಲಾ ಸಮಸ್ಯೆಗಳನ್ನು ನ್ಯಾಯೋಚಿತವಾಗಿ ಪರಿಹರಿಸಿಕೊಳ್ಳಬಹುದಾಗಿದೆ.
ಶಿಕ್ಷಕ ಸಮುದಾಯದ ಸಮಗ್ರ ಹಿತವನ್ನು ರಕ್ಷಿಸಿ ಆರೋಗ್ಯಕರ, ಸುಸ್ಥಿರ ಶಿಕ್ಷಕ ಸಮುದಾಯವನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ನಾನು ಧುಮುಕಿದ್ದೇನೆ. ಆದುದರಿಂದ ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ನನ್ನ ದೃಢವಾದ ಹೆಜ್ಜೆಯನ್ನು ಇಡುತ್ತಿದ್ದೇನೆ. ಈ ಕಾರ್ಯವನ್ನು ಮಾಡಲು ಅವಕಾಶವಾಗುವಂತೆ ಜೂನ್ 3, 2024ರಂದು ನಡೆಯುವ ನೈಋತ್ಯ ಶಿಕ್ಷಕರ ಚುನಾವಣೆಯಲ್ಲಿ ನನಗೆ ತಮ್ಮ ಅಮೂಲ್ಯ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಚುನಾಯಿಸುವಂತೆ ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.
ಪ್ರಸ್ತಾಪಿತ ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮವು ಈ ಕೆಳಗಿನ ಪ್ರಮುಖ ಅಂಶಗಳನ್ನು ಹೊಂದಿರಲಿದೆ.
- ಖಾಸಗಿ ಶಾಲಾ -ಕಾಲೇಜು ಮತ್ತು ಅತಿಥಿ ಉಪನ್ಯಾಸಕರ ಕನಿಷ್ಠ ವೇತನವು ಆ ಹುದ್ದೆಯ ಮೂಲ ವೇತನವಾಗಿರತಕ್ಕದ್ದು.
- ಮಹಿಳಾ ಶಿಕ್ಷಕರಿಗೆ ವಾರ್ಷಿಕ 15 ಸಾಂದರ್ಭಿಕ ರಜೆಗಳ ಜೊತೆಗೆ ಹೆಚ್ಚುವರಿ 5 ಸಾಂದರ್ಭಿಕ ರಜೆಗಳನ್ನು ನೀಡತಕ್ಕದ್ದು.
- ಶಿಕ್ಷಕರ ಗುತ್ತಿಗೆ ಆಧಾರದ ನೇಮಕಾತಿಯ ಅವಧಿಯು 11 ತಿಂಗಳುಗಳ ಬದಲಾಗಿ ಕನಿಷ್ಠ 36 ತಿಂಗಳುಗಳು ಆಗಿರತಕ್ಕದ್ದು.
- ಎಲ್ಲಾ ಗುತ್ತಿಗೆ ಆಧಾರಿತ ಶಿಕ್ಷಕರಿಗೆ ಭವಿಷ್ಯ ನಿಧಿ ಮತ್ತು ಇಎಸ್ಐ ಸೌಲಭ್ಯಗಳನ್ನು ಒದಗಿಸತಕ್ಕದ್ದು.
- ಕಾಲಮಿತಿಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡತಕ್ಕದ್ದು.
- ಖಾಯಂ ನೇಮಕಾತಿ ಸಂದರ್ಭದಲ್ಲಿ ಬೋಧನಾನುಭವ ಇರುವ ಅಭ್ಯರ್ಥಿಗಳಿಗೆ ವಾರ್ಷಿಕ ಕೃಪಾಂಕವನ್ನು ನೀಡುವುದರೊಂದಿಗೆ ವಯೋಮಿತಿಯಲ್ಲಿ ಸಡಿಲಿಕೆ ಮಾಡತಕ್ಕದ್ದು.
- ಸರಕಾರ ಜೀವವಿಮೆ ಮತ್ತು ಆರೋಗ್ಯ ವಿಮೆಯನ್ನು ಕಡ್ಡಾಯವಾಗಿ ಜಾರಿಗೊಳಿಸತಕ್ಕದ್ದು.
- 15 ವರ್ಷ ಮೇಲ್ಪಟ್ಟು ಸೇವಾ ಅನುಭವ ಇರುವ ಗುತ್ತಿಗೆ ಶಿಕ್ಷಕರಿಗೆ ರೂ.10 ಲಕ್ಷವನ್ನು ಭದ್ರತಾ ಠೇವಣಿಯಾಗಿ ಇಡತಕ್ಕದ್ದು.
- ಸಾರ್ವತ್ರಿಕ ಚುನಾವಣೆ ಹಾಗೂ ಅನ್ಯಕಾರ್ಯಗಳಿಗೆ ಶಿಕ್ಷಕರನ್ನು ಬಳಸುವಾಗ ಶೈಕ್ಷಣಿಕ ಕಾರ್ಯಕ್ಕೆ ಪ್ರಥಮ ಆದ್ಯತೆಯನ್ನು ನೀಡತಕ್ಕದ್ದು.
- ದಂಡನಾ ನಿಯಮಗಳು ಶಿಕ್ಷಕ ಸ್ನೇಹಿಯಾಗಿರತಕ್ಕದ್ದು.